ಇಡಿ ಬಂಧನ ಭೀತಿ: ಅಜ್ಞಾತವಾಸದಲ್ಲಿ ಶಾಸಕ ಬಸನಗೌಡ ದದ್ದಲ್, ರಾಯಚೂರಿನಲ್ಲಿ ಆಪ್ತರ ಭೇಟಿ..! ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ನಿವಾಸಗಳ ಮೇಲೂ ಇಡಿ ದಾಳಿಯಾಗಿದ್ದು, ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದೆ. ಹೀಗಾಗಿ ನಿಗದ ಅಧ್ಯಕ್ಷರಾಗಿರುವ ದದ್ದಲ್ಗೂ ಬಂಧನದ ಭೀತಿ ಶುರುವಾಗಿದೆ. ರಾಯಚೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದ ಪ್ರಕರಣದಲ್ಲಿ ಸಿಲುಕಿರುವ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಇಡಿ ಬಂಧನದ ಭೀತಿಯಲ್ಲೇ ಕದ್ದುಮುಚ್ಚಿ ಓಡಾಡುತ್ತಿದ್ದಾರೆ.ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂಪಾಯಿ ಹಗರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಪ್ರಕರಣ ಸಂಬಂಧ ಈಗಾಗಲೇ ಈ ಇಲಾಖೆಯ ಸಚಿವರಾಗಿದ್ದ ಶಾಸಕ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.ಇದರ ಮಧ್ಯ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ನಿವಾಸಗಳ ಮೇಲೂ ಇಡಿ ದಾಳಿಯಾಗಿದ್ದು, ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದೆ. ಹೀಗಾಗಿ ನಿಗದ ಅಧ್ಯಕ್ಷರಾಗಿರುವ ದದ್ದಲ್ಗೂ ಬಂಧನದ ಭೀತಿ ಶುರುವಾಗಿದೆ.ಈ ಹಿನ್ನೆಲೆಯಲ್ಲಿ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿರುವ ದದ್ದಲ್ ಭಾನುವಾರ ರಾಯಚೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ.ಯಾರ ಸಂಪರ್ಕಕ್ಕೂ ಸಿಗದ ದದ್ದಲ್ ರಾತ್ರೋರಾತ್ರಿ ರಾಯಚೂರಿನಲ್ಲಿರುವ ತಮ್ಮ ನಿವಾಸಕ್ಕೆ ಬಂದಿದ್ದು, ಬೆಂಬಲಿಗರನ್ನು ಭೇಟಿ ಮಾಡಿ ಹೋಗಿದ್ದಾರೆ,ಶನಿವಾರ ತಡರಾತ್ರಿ ತಮ್ಮದಲ್ಲದ ಖಾಸಗಿ ಕಾರಿನಲ್ಲಿ ಹುಟ್ಟೂರು ರಾಯಚೂರಿಗೆ ಬಂದಿರುವ ದದ್ದಲ್ ಅವರು, ಬೆಂಬಲಿಗರೊಂದಿಗೆ ಮಾತುಕತೆ ನಡೆಸಿ ಭಾನುವಾರ ಬೆಳ್ಳಂಬೆಳಿಗ್ಗೆ ಅದೇ ಕಾರಿನಲ್ಲಿ ಆಂಧ್ರಪ್ರದೇಶಕ್ಕೆ ತೆರಳಿದ್ದಾರೆಂದು ಮೂಲಗಳು ತಿಳಿಸಿವೆ.